24/06/2024
ಹರೇರಾಮ
ಸಾವಿರಾರು ವರ್ಷಗಳಿಗಿಂತಲೂ ಪುರಾತನವಾದ ಮಹಾಭಾರತದಲ್ಲಿ, ಪರಮ ಭಾಗವತೋತ್ತಮರಾದ ಭೀಷ್ಮಾಚಾರ್ಯರು ಪರಮಜ್ಞಾನಿ ಧರ್ಮರಾಜನಿಗೆ ಜನ್ಮ ಸಾರ್ಥಕ್ಯಕಾರಕ ಎಂಬುದಾಗಿ ವಿಷ್ಣು ಸಹಸ್ರನಾಮವನ್ನು ಬೋಧಿಸಿದರು. ಅಲ್ಲಿಂದ ಇಲ್ಲಿಯವರೆಗೆ ಕೋಟ್ಯಂತರ ಜೀವಿಗಳು ವಿಷ್ಣು ಸಹಸ್ರನಾಮ ಪಾರಾಯಣದಿಂದ ಇಷ್ಟಾಪೂರ್ತಿಯನ್ನು ಹೊಂದಿರುವುದು ಕಂಡುಬರುತ್ತದೆ.
ಭಗವಂತನನ್ನು ಅವನ ಗುಣದ ಅನುಸಂಧಾನದ ಮೂಲಕ ಸ್ತುತಿಸುವ ವಿಷ್ಣು ಸಹಸ್ರನಾಮ ಪಠಣ ಭವಬಂಧನವನ್ನು ಕಳಚುವುದು.
*ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದಲ್ಲಿರುವ ಶ್ರೀಗೋವರ್ಧನಗಿರಿಧಾರಿಯ ಸನ್ನಿಧಿಯು ವಿಷ್ಣುಸಹಸ್ರನಾಮ ಕ್ಷೇತ್ರವಾಗಿ ಸಾಕಾರಗೊಳ್ಳುತ್ತಿದೆ*.
ವಿಷ್ಣು ಸಹಸ್ರನಾಮ ಕ್ಷೇತ್ರವಾಗಿ ಬೆಳೆದು, ಬೆಳಗಲಿರುವ ಇಂತಹ ದಿವ್ಯ ಕ್ಷೇತ್ರದಲ್ಲಿ ನಿರಂತರ ವಿಷ್ಣು ಸಹಸ್ರನಾಮ ಅನುರಣನೆ ಆಗಬೇಕೆಂಬ ಮಹದಾಶಯದೊಂದಿಗೆ ಪರಮಪೂಜ್ಯ ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಪ್ರತಿ ಶನಿವಾರದಂದು ಪ್ರಾತಃಕಾಲದಲ್ಲಿ ಸೋಪಾನಮಾಲೆಯಲ್ಲಿ ವಿಷ್ಣು ಸಹಸ್ರನಾಮ ಪಠಣ ಮಾಡುವ ವಿಷ್ಣುಪದಮ್' ನಡೆಯುತ್ತಿದೆ.
ಗೋಲೋಕದ ಗಿರಿಶಿಖರದಲ್ಲಿ ನೆಲೆ ನಿಂತಿರುವ ಗೋವರ್ಧನಗಿರಿಧಾರಿಯ ಪದತಡಿಗೆ ಏರಲು ಬೆಟ್ಟಕ್ಕೆ ಮೆಟ್ಟಿಲು ಕಟ್ಟಿ ಸೋಪಾನಮಾಲೆ ನಿರ್ಮಾಣ ಮಾಡಲಾಗಿದೆ. ಪವಿತ್ರ ಸೋಪಾನಮಾಲೆಯಲ್ಲಿ ಒಂದೊಂದು ಮೆಟ್ಟಿಲುಗಳಲ್ಲಿಯೂ ವಿಷ್ಣು ಸಹಸ್ರನಾಮದ ಒಂದೊಂದು ಶ್ಲೋಕವನ್ನು ಪಠಿಸುತ್ತಾ 108 ಮೆಟ್ಟಿಲುಗಳನ್ನೇರಿ ಶ್ರೀಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವರ ದರ್ಶನ ಪಡೆದಲ್ಲಿ ಅಗಣಿತ ಫಲ ಪ್ರಾಪ್ತಿಯಾಗುವುದು.
*ಪ್ರಸ್ತುತ ಗೋಲೋಕ ಯೋಜನೆಯ ಸಾಕಾರಕ್ಕಾಗಿ ವಿಶೇಷವಾಗಿ ವಿಷ್ಣು ಸಹಸ್ರನಾಮ ಲೇಖನ ಯಜ್ಞವನ್ನು ಆಯೋಜಿಸಲಾಗುತ್ತಿದೆ*.
ವಿಷ್ಣು ಸಹಸ್ರನಾಮದ 108 ಶ್ಲೋಕಗಳನ್ನು 108 ಬಾರಿ ಬರೆಯುವ ಈ ಮಹಾಯಜ್ಞದ ಪುಸ್ತಕವನ್ನು ಪರಮಪೂಜ್ಯ ಶ್ರೀಸಂಸ್ಥಾನದವರು ತಾರೀಕು 13-08-2023 ರಂದು ಗೋಕರ್ಣದ ಅಶೋಕೆಯಲ್ಲಿ ಲೋಕಾರ್ಪಣೆ ಮಾಡಿರುತ್ತಾರೆ.
ಬರೆಯುವುದು ಓದುವುದಕ್ಕಿಂತ ಅದೆಷ್ಟೋ ಹೆಚ್ಚು ಪರಿಣಾಮಕಾರಿ. ಒಮ್ಮೆ ಬರೆಯುವುದು ನೂರಾರು ಬಾರಿ ಓದುವುದಕ್ಕೆ ಸಮ ಎನ್ನುವುದು ಪ್ರಾಚೀನರ ವಿಶ್ವಾಸ. ವಿಷ್ಣು ಸಹಸ್ರನಾಮ ಓದುವುದರ ಜೊತೆಗೆ ಬರೆಯುವುದು ಕೂಡಾ ಮಾಡಿದಾಗ ಮನಸ್ಸಿನ ಮೇಲೆ ಮತ್ತಷ್ಟು ಉತ್ತಮ ಪರಿಣಾಮ ಬೀರುವುದು ಎಂದು ಮನೋ ವೈಜ್ಞಾನಿಕವಾಗಿ ಸಿದ್ಧವಾದ ಸತ್ಯ. ಇದರಿಂದ ಶ್ರೇಷ್ಠವಾದ ವಿಚಾರ ಮನಸ್ಸಿನ ಆಳಕ್ಕಿಳಿದು ಚಿರಸ್ಥಾಯಿಯಾಗಿಸುವುದು. ಏಕಾಗ್ರತೆಯಿಂದ ನಾಮ ಸಹಸ್ರಗಳ ಸದಾಶಯಗಳನ್ನು ಅರಿತುಕೊಂಡರೆ, ಅದು ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿ, ಮನೋಬುದ್ದಿಯಲ್ಲಿ ನೆಲೆ ನಿಂತು, ನಿತ್ಯವೂ ಸನ್ಮಂಗಲವನ್ನು ಉಂಟು ಮಾಡುತ್ತದೆ.
ಈಗಾಗಲೇ ಸಾವಿರಾರು ಮಂದಿ ಈ ಲೇಖನ ಯಜ್ಞದಲ್ಲಿ ಜೋಡಿಕೊಂಡಿದ್ದು ಆಸ್ತಿಕ ಬಾಂಧವರೆಲ್ಲರಿಗೂ ಈ ಪುಣ್ಯಕಾರ್ಯದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸುವ ದೃಷ್ಟಿಯಿಂದ ಈ ಲೇಖನ ಯಜ್ಞವನ್ನು ರಾಜ್ಯ ಮಟ್ಟದಲ್ಲಿ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಕುರಿತು 30-6-2024 ಆದಿತ್ಯವಾರದಂದು ಬೆಂಗಳೂರಿನ ಗಿರಿನಗರದ ಪುನರ್ವಸು ಭವನದಲ್ಲಿ ವಿಶೇಷ ದೀಕ್ಷಾ/ಸಂಕಲ್ಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
*ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಮತ್ತು ಸಾನಿಧ್ಯದಲ್ಲಿ ಈ ಸಮಾರಂಭವು ಸಂಪನ್ನಗೊಳ್ಳಲಿದೆ. ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಇವರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ವಿಶೇಷ ಸಮಾರಂಭದಲ್ಲಿ ಭಾಗವಹಿಸಿ*🙏