ಈ ಮನಸು

ಈ  ಮನಸು █║▌│█│║▌║││█║▌║█║▌│█│║
ಈ ಮನಸು Verified Officia

09/06/2025
ಸ್ವಾಮೀ ನನ್ನಿಂದ ನೀನಿಂತೊರೆಯಿಸಿದ ಕೃಪಾದೃಷ್ಟಿಯಂ ಬೀರಿ ಲೋಕ | ಪ್ರೇಮಂದಾಳ್ದಿಂತು ನೀತಿ ಪ್ರಕಟನೆ ಪಡೆ ನಾಲ್ಸಾಸಿರಂ ನಾಲ್ಕು ನೂರಂ |ಈ ಮಾಯಾಪೂರ...
09/06/2025

ಸ್ವಾಮೀ ನನ್ನಿಂದ ನೀನಿಂತೊರೆಯಿಸಿದ ಕೃಪಾದೃಷ್ಟಿಯಂ ಬೀರಿ ಲೋಕ |
ಪ್ರೇಮಂದಾಳ್ದಿಂತು ನೀತಿ ಪ್ರಕಟನೆ ಪಡೆ ನಾಲ್ಸಾಸಿರಂ ನಾಲ್ಕು ನೂರಂ |
ಈ ಮಾಯಾಪೂರ್ಣ ಕಲ್ಯಬ್ದದೆ ಗತಿವಿಕಾರ್ಯಬ್ದಲ್ಲೀಸ್ವರಾ ನೀ|
ನ್ನಾ ಮಾಹಾತ್ಮಾಂಘ್ರಿಗಿತ್ತೆಂ ಪುಲಿಗಿರೀಶಾಸನಾಂಕಾ ಮಹೇಶಾ ||೧೦೩||

ಪದವಿಭಾಗ

ನೀನಿಂತೊರೆಯಿಸಿದ = ನೀನು+ ಇಂತು+ ಒರೆಯಿಸಿದ
ಪ್ರೇಮಂದಾಳ್ದಿಂತು = ಪ್ರೇಮಂ+ ತಾಳ್ದು+ ಇಂತು
ವಿಕಾರ‌್ಯಬ್ದದಲ್ಲೀಸ್ವರಾ= ವಿಕಾರಿ+ ಅಬ್ದದಲ್ಲಿ+ ಈ ಸ್ವರಾ

ಕಠಿಣ ಪದಗಳ ಅರ್ಥ

ಒರೆಯಿಸು= ಬರೆಸು
ಸಾಸಿರ= ಸಾವಿರ
ಕಲ್ಯಬ್ದ = ಕಲಿಯುಗ
ಅಬ್ದ = ವರ್ಷ
ವಿಕಾರಿ= ವಿಕಾರಿ ನಾಮ ಸಂವತ್ಸರ
ಅಂಘ್ರಿ = ಪಾದ

ಅರ್ಥ

ಮಂಗಳದ ಪದ್ಯವನ್ನು ಸ್ರಗ್ಧರಾ ವೃತ್ತದಲ್ಲಿ ಬರೆಯಲಾಗಿದೆ. ಜಗದೊಡೆಯನಾದ ಸೋಮನಾಥನೇ, ನನ್ನ ಮೇಲಿನ ಪ್ರೀತಿಯಿಂದ ನನ್ನಿಂದ ಈ ಶತಕವನ್ನು ಬರೆಸಿ ಲೋಕವೇ ನನ್ನನ್ನು ಪ್ರೀತಿಸುವಂತೆ ಮಾಡಿರುವೆ. ಈ ಕೃತಿಯು ಕಲಿಯುಗದ ನಾಲ್ಕು ಸಾವಿರದ ನಾಲ್ಕು ನೂರನೇ ವರ್ಷಕ್ಕೆ ವಿಕಾರಿ ಸಂವತ್ಸರದಲ್ಲಿ ಮುಗಿದಿದೆ. ಈ ಕೃತಿಯನ್ನು ಈಶ್ವರಾ ನಿನ್ನ ಪಾದಕಮಲಗಳಿಗೆ ಅರ್ಪಿಸಿದ್ದೇನೆ. ಪುಲಿಗಿರಿ ಪಟ್ಟಣದೊಡೆಯನೇ ನನ್ನನ್ನು ಸದಾ ಕಾಲ ಅನುಗ್ರಹಿಸು.

ವಿವರಣೆ

ಸೋಮೇಶ್ವರ ಶತಕದ ಕೊನೆಯ ಪದ್ಯ.

ಮಂಗಳ ಪದ್ಯವಿದು. ತನ್ನ ಕಾರ್ಯವು ಸಫಲವಾಗಿ ಮುಕ್ತಾಯಗೊಂಡ ಕಾರಣ ಅದನ್ನು ತನ್ನಿಷ್ಟ ದೈವವಾದ ಈಶ್ವರನಿಗೆ ಅರ್ಪಿಸುವ ಕೆಲಸವನ್ನು ಸೋಮನಾಥ ಕವಿ ಮಾಡಿದ್ದಾನೆ. ಪುಲಿಗೆರೆಯ ಸೋಮೇಶ್ವರನ ಚರಣಕಮಲಗಳಿಗೆ ಕೃತಿ ಪುಷ್ಪವನ್ನು ಅರ್ಪಿಸಿದ್ದಾನೆ.

ಇಲ್ಲಿ ಅಹಮಿಕೆಯಿಲ್ಲ, ಬದಲಾಗಿ ಶಿವನೊಲುಮೆಗೆ ಹಾತೊರೆವ ಶರಣಸತಿಯ ಭಾವವಿದೆ. ನೀ ಬರೆಸಿದ ಕೃತಿಗೆ ನಾ ನೆಪ ಮಾತ್ರ - ಎನ್ನುವ ವಿನಯವಿದೆ. ಲೋಕಪ್ರೇಮವನ್ನು ಪಡೆದ ತೃಪ್ತಿಯಿದೆ.

ಕಲಿಯುಗದ ೪೪೦೦ ನೇ ವರ್ಷದ ವಿಕಾರಿ ನಾಮ ಸಂವತ್ಸರದಲ್ಲಿ ಮುಕ್ತಾಯವಾದ ವಿಚಾರವಿದೆ. ಅಂದರೆ ೭೨೫ ವರ್ಷಗಳ ಹಿಂದಿನ ರಚನೆಯಿದು. ಸುಮಾರು ಕ್ರಿ. ಶ.೧೩೦೦ನೇ ವರ್ಷದಲ್ಲಿ ರಚಿತವಾದುದು.

ಸೋಮನಾಥನ ಶ್ರಮದ ಸಾರ್ಥಕತೆಯು ಅವನ ವಿಚಾರಗಳನ್ನು ಕಾಲಾನುಗುಣವಾಗಿ ಅಳವಡಿಸಿಕೊಳ್ಳುವ ನಮ್ಮ ನಡವಳಿಕೆಯಲ್ಲಿದೆ.

ಇಲ್ಲಿಗೆ ಸೋಮೇಶ್ವರಶತಕದ ವ್ಯಾಖ್ಯಾನ ಸರಣಿಯು ಮುಗಿಯಿತು. ಇದನ್ನು ಓದಿದ , ಆಲಿಸಿದ ಎಲ್ಲ ಸಹೃದಯರಿಗೂ ಧನ್ಯವಾದಗಳು. ಮತ್ತೊಮ್ಮೆ ನಿಮ್ಮ ಮುಂದೆ ಹೊಸ ಕೃತಿಯೊಂದಿಗೆ ಬರುತ್ತೇನೆ.

ನಮಸ್ಕಾರ

ತನಾಶಿ.

ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ |ಯತಮಂ ನಿಶ್ಚಲ ಚಿತ್ತಮಂ ನೃಪರಾಸ್ಥಾನೋಚಿತಾರ್ಥಂಗಳಂ |ಅತಿ ಮಾಧುರ್ಯ ಸುಭಾಷಿತಂಗಳ ಮಹಾಸತ...
08/06/2025

ಮತಿಯಂ ಬುದ್ಧಿಯ ಜಾಣ್ಮೆಯಂ ಗಮಕಮಂ ಗಾಂಭೀರ್ಯಮಂ ನೀತಿಯಾ |
ಯತಮಂ ನಿಶ್ಚಲ ಚಿತ್ತಮಂ ನೃಪರಾಸ್ಥಾನೋಚಿತಾರ್ಥಂಗಳಂ |
ಅತಿ ಮಾಧುರ್ಯ ಸುಭಾಷಿತಂಗಳ ಮಹಾಸತ್ಕೀರ್ತಿಯಂ ಬಾಳ್ಕೆಯಂ|
ಶತಕಾರ್ಥಂ ಕೊಡದಿರ್ಪುದೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧೦೨||

ಪದವಿಭಾಗ

ನೃಪವರಾಸ್ಥಾನೋಚಿತಾರ್ಥಂ = ನೃಪ+ ವರ+ ಆಸ್ಥಾನ+ ಉಚಿತ+ ಅರ್ಥಂ
ಶತಕಾರ್ಥಂ = ಶತಕ+ ಅರ್ಥಂ

ಕಠಿಣ ಪದಗಳ ಅರ್ಥ

ಗಮಕ= ರಾಗಬದ್ದವಾಗಿ ವಾಚಿಸುವುದು
ಆಸ್ಥಾನ = ರಾಜನ ಓಲಗ

ಅರ್ಥ

ಕವಿ ತನ್ನ ಕೃತಿಯನ್ನು ಓದುವುದರಿಂದ ಪ್ರಯೋಜನವೇನೆಂದು ಹೇಳುತ್ತಿದ್ದಾನೆ. ಈ ಶತಕವನ್ನು ಓದುವುದರಿಂದ ಮನದಲ್ಲಿ ಬುದ್ಧಿ ಬೆಳೆಯುತ್ತದೆ. ಜಾಣರಾಗುತ್ತಾರೆ. ಕಾವ್ಯಗಳನ್ನು ಆಸ್ವಾದಿಸುತ್ತಾರೆ. ಬದುಕಿನಲ್ಲಿ ಗಂಭೀರತೆ ಬರುತ್ತದೆ. ನೀತಿಗಳ ಅರಿವು ಉಂಟಾಗುತ್ತದೆ. ದೃಢತೆ ಹೆಚ್ಚುತ್ತದೆ. ರಾಜಾಶ್ರಯ ಸಿಗುತ್ತದೆ. ಭಾಷೆ ಉತ್ತಮವಾಗುತ್ತದೆ. ವಾಗರ್ಥಗಳ ಪರಿಚಯ ಉಂಟಾಗುತ್ತದೆ. ಕೀರ್ತಿ ಲಭಿಸುತ್ತದೆ. ಬಾಳು ಬೆಳಗುತ್ತದೆ.

ವಿವರಣೆ

ಕಾವ್ಯ ಪ್ರಯೋಜನವೆಂಬ ಮಾತಿದೆ. ನಾವು ಯಾವುದನ್ನು ಮಾಡಿದರೆ ಏನು ಉಪಯೋಗವೆಂದು ಚಿಂತಿಸುತ್ತೇವೆ. ಅದಕ್ಕೆ ಉತ್ತರವಾಗಿ ಕವಿ ಇಲ್ಲಿ ಹೇಳಿದ್ದಾನೆ.

ಈ ನೀತಿ ಶತಕವನ್ನು ಓದಿ ಅದರಂತೆ ನಡೆದರೆ, ಅಂತಹವರ ಮತಿಯು ನಿರ್ಮಲವಾಗಿ ನಿಷ್ಕಲ್ಮಶವಾಗಿರುತ್ತದೆ. ಅವರ ಬುದ್ಧಿಮತ್ತೆ ಹೆಚ್ಚುತ್ತದೆ. ಜಾಣ್ಮೆಯು ಬಲಿಯುತ್ತದೆ. ಅಂತಹ ಜನಗಳಲ್ಲಿ ಜೀವನೋತ್ಸಾಹ ಹೆಚ್ಚುತ್ತದೆ.

ಅವರ ಬದುಕು ಚೆಲ್ಲು ಚೆಲ್ಲಾಗದೇ ಗಂಭೀರತೆಯಿಂದ ಕೂಡಿರುತ್ತದೆ. ಅವರ ಬಾಳು ನೀತಿಯುತವಾಗಿರುತ್ತದೆ.

ಚಿತ್ತ ಚಾಂಚಲ್ಯವು ಸಂಪೂರ್ಣ ಹೋಗಿ, ದೃಢತೆಯು ಮನೆಮಾಡುತ್ತದೆ. ವಿದ್ಯಾಸಂಪನ್ನರಾಗುವ ಕಾರಣ ರಾಜರಿಂದ ಗೌರವ ಸಮರ್ಪಣೆಯಾಗುತ್ತದೆ. ಅವರ ಮಾತುಗಳೆ ಸುಭಾಷಿತವಾಗುತ್ತದೆ. ಕೀರ್ತಿಯು ಎಲ್ಲೆಡೆ ಹಬ್ಬುತ್ತದೆ. ಬಾಳು ಸಾರ್ಥಕವಾಗುತ್ತದೆ. ನೀತಿಯು ಎಂದಿಗೂ ಮನುಕುಲದ ಏಳ್ಗೆಯನ್ನು ಬಯಸುತ್ತದೆ.

ಪ್ರಚುರಂ ಪತ್ತೊಳಗಾಗೆರಂಧ್ರವನೆ ಕೈಗೊಂಡೆಂಟನಿಗೇಳ ಬಿ |ಟ್ಟುಚಿತಂ ತಾನೆನಿಪಾರ ಕಟ್ಟುತೈಗದಕ್ಕೀಡಾಗದೇ ನಾಲ್ವರಂ |ರಚನಂಗೈಯದೆ ಮೂರನಂಬದೆರಡಂ ಬಿಟ್ಟ...
07/06/2025

ಪ್ರಚುರಂ ಪತ್ತೊಳಗಾಗೆರಂಧ್ರವನೆ ಕೈಗೊಂಡೆಂಟನಿಗೇಳ ಬಿ |
ಟ್ಟುಚಿತಂ ತಾನೆನಿಪಾರ ಕಟ್ಟುತೈಗದಕ್ಕೀಡಾಗದೇ ನಾಲ್ವರಂ |
ರಚನಂಗೈಯದೆ ಮೂರನಂಬದೆರಡಂ ಬಿಟ್ಟೊಂದರೊಳ್ ನಿಲ್ಲದಾ |
ವಚನ ಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧೦೧||

ಪದವಿಭಾಗ

ಪತ್ತೊಳಗಾಗೆ = ಪತ್ತು + ಒಳಗಾಗೆ
ಕೈಗೊಂಡೆನೆಂಟನೀಗೇಳ = ಕೈ + ಕೊಂಡೆನು+ ಎಂಟನು+ಈಗ + ಏಳ
ಕಟ್ಟುತೈಗದಕ್ಕೀಡಾಗದೆ = ಕಟ್ಟುತ+ ಐಗದಕ್ಕೆ+ ಈಡಾಗದೆ
ಮೂರನಂಬದೆರಡಂ= ಮೂರ+ ನಂಬದೆ+ ಎರಡಂ

ಕಠಿಣ ಪದಗಳ ಅರ್ಥ

ಪತ್ತು = ಇಂದ್ರಿಯಗಳು
ರಂಧ್ರ= ನವರಂಧ್ರ
ಎಂಟು = ಅಷ್ಟಮದ
ಏಳು= ಏಳು ವ್ಯಸನಗಳು
ಆರು = ಷಡ್ಗುಣ
ಐದು= ಪಂಚಶರ
ನಾಲ್ಕು= ಪುರುಷಾರ್ಥ
ಮೂರು= ಆಸೆಗಳು
ಎರಡು= ನೋವು ನಲಿವು
ಒಂದು= ಬ್ರಹ್ಮ

ಅರ್ಥ

ಆಚರಣೆಯಲ್ಲಿರದ ಜ್ಞಾನವು ಮಾತಲ್ಲಿರಬಾರದು. ಹತ್ತು ಇಂದ್ರಿಯಗಳನ್ನು ನಿಗ್ರಹಿಸಿ. ನವರಂಧ್ರಗಳ ನಿಯಂತ್ರಿಸಿ, ಅಷ್ಟ ಮದಗಳನರಿತು, ಸಪ್ತವ್ಯಸನವ ದೂರಾಗಿಸಿ, ಷಡ್ಗುಣಗಳ ಬಲಿಸಿ, ಪಂಚಬಾಣಗಳ ತಪ್ಪಿಸಿ, ಪುರುಷಾರ್ಥ ಪಡೆಯದ, ಆಶಾತ್ರಯಗಳನ್ನು ಗೆಲ್ಲದ, ಸುಖ ದುಃಖಗಳ ಸಮಾನತೆಯಲ್ಲಿ ಕಾಣದ, ಬ್ರಹ್ಮನಲ್ಲಿ ಮನ ನೆಲೆಸದ ಜನರಿಗೆ ಮುಕ್ತಿ ದೊರಕದು.

ವಿವರಣೆ

ಈ ಶತಕವು ವಿಶಿಷ್ಡವಾಗಿದೆ. ಸಂಖ್ಯಾ ಚಮತ್ಕಾರಗಳನ್ನು ಮಾಡುತ್ತದೆ. ಹತ್ತರಿಂದ ಒಂದರವರೆಗಿನ ಲೆಕ್ಕದಲ್ಲಿ ಹೊಸ ಜಾದೂವನ್ನು ಹೇಳುತ್ತದೆ.

ಹತ್ತು ಇಂದ್ರಿಯಗಳೆಂದರೆ, ಐದು ಜ್ಞಾನೇಂದ್ರಿಯಗಳು
ಐದು ಕರ್ಮೇಂದ್ರಿಯಗಳು.

ಮೊದಲ ಐದು ಪಂಚೇಂದ್ರಿಯಗಳು. ಕಣ್ಣು, ಕಿವಿ, ಮೂಗು, ನಾಲಗೆ ಮತ್ತು ಚರ್ಮ.
ನಂತರದ ಐದು ಕರ್ಮಕ್ಕೆ ಸಂಬಂಧಿಸಿದ್ದು. ವಾಕ್, ಪಾಣಿ, ಪಾದ, ಪಾಯು, ಉಪಸ್ಥಗಳು. ವಾಕ್, ಬೇಕು ಬೇಡಗಳನ್ನು ಹೇಳುವ, ಪಾಣಿ - ತಾಡನ ಮುಂತಾದುವನ್ನು ಮಾಡುವ, ಪಾದ - ನಿರ್ಗಮನಾಗಮನಗಳನ್ನು ಮಾಡುವ, ಪಾಯು - ಅಪಾನ ಮಲಗಳನ್ನು ವಿಸರ್ಜಿಸುವ, ಉಪಸ್ಥ - ಜನನೇಂದ್ರಿಯ.

ಹೀಗೆ ಕರಣಗಳ ಮೂಲಕ ಕರ್ಮ ಪ್ರಚೋದನೆ ಮಾಡುವ ಇವುಗಳನ್ನು ಹಿಡಿತದಲ್ಲಿಡಬೇಕು.

ನವರಂಧ್ರಗಳು

ಕಣ್ಣು ೨, ಕಿವಿ ೨, ಮೂಗು ೧, ಬಾಯಿ ೧, ನಾಭಿ ೧, ಮಲ ಮೂತ್ರ ದ್ವಾರಗಳು. ಇವುಗಳನ್ನು ಮುಚ್ಚುವುದೆಂದರೆ ದೇಹತ್ಯಾಗವೇ.

ಅಷ್ಟಮದ

ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ ಮತ್ತು ಅಧಿಕಾರ. ಇವುಗಳನ್ನು ಅರಿಯುವುದು.

ಸಪ್ತವ್ಯಸನಗಳು

ಇದರಲ್ಲಿ ಕೋಪದಿಂದ ಹುಟ್ಟುವ ಮೂರು, ಮಾತು, ನಿಂದೆ ದಂಡನೆ. ಕಾಮದಿಂದ ಹುಟ್ಟುವ ನಾಲ್ಕು, ಬೇಟೆ, ಜೂಜು, ಹೆಣ್ಣು, ಪಾನಗಳು. ಇವನ್ನು ಬಿಡಬೇಕು.

ಷಡ್ಗುಣಗಳು

ಕ್ಷಮೆ, ದಯೆ, ಶಾಂತಿ, ಸೈರಣೆ, ಸತ್ಯ ಮತ್ತು ನಿತ್ಯ ಇವನ್ನು ನಮ್ಮ ಹಿಡಿತದಲ್ಲಿಡಬೇಕು.

ಪಂಚಬಾಣಗಳು

ಅರವಿಂದ, ಚೂತ, ಅಶೋಕ, ನವಮಲ್ಲಿಕಾ, ನೀಲೋತ್ಫಲ. ಇವುಗಳ ಸೆಳೆತಕ್ಕೆ ಸಿಗಬಾರದು.

ಪುರುಷಾರ್ಥಗಳು

ಧರ್ಮ, ಅರ್ಥ, ಕಾಮ, ಮೋಕ್ಷಗಳು ಇವನ್ನು ಗಳಿಸಬೇಕು.

ಅವಸ್ಥಾತ್ರಯಗಳು

ಇವು ಆಶಾಮೂಲಗಳು. ಸ್ವಪ್ನ, ಜಾಗೃತ, ಸುಷುಪ್ತಿ. ಇಲ್ಲಿ ಆರಾಮವಾಗಿ ಅನುಭವಿಸಬೇಕು. ಸುಖ ಮತ್ತು ದುಃಖಗಳನ್ನು ಸಮಾನವಾಗಿ ಕಾಣಬೇಕು. ಬ್ರಹ್ಮ ಒಂದೆಂದು ತಿಳಿದು ಅವನಲ್ಲಿ ಲೀನವಾಗಬೇಕು.

ಇವುಗಳನ್ನು ಮಾಡದೇ ಬರಿಮಾತಿನಿಂದ ಮುಕ್ತಿ ಸಿಗದು.

ಶುಚಿ ತಾನಾಗದೆ ಸರ್ವ ಶಾಸ್ತ್ರ ನಿಪುಣಂ ತಾನಾಗದೇ ಕಾಮಮಂ |ವಚನಂಗೈಯದೆ ಕೋಪಮಂ ಬಿಡದೆ ಲೋಭಚ್ಛೇದಮಂ ಮಾಡದೇ |ರುಚಿಮೋಹಕ್ಕೊಳಗಾಗದಂತು ಮದಮಾತ್ಸ್ಯರಂಗ...
06/06/2025

ಶುಚಿ ತಾನಾಗದೆ ಸರ್ವ ಶಾಸ್ತ್ರ ನಿಪುಣಂ ತಾನಾಗದೇ ಕಾಮಮಂ |
ವಚನಂಗೈಯದೆ ಕೋಪಮಂ ಬಿಡದೆ ಲೋಭಚ್ಛೇದಮಂ ಮಾಡದೇ |
ರುಚಿಮೋಹಕ್ಕೊಳಗಾಗದಂತು ಮದಮಾತ್ಸ್ಯರಂಗಳಂ ನೀಗದೇ |
ವಚನಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೧೦೦||

ಪದವಿಭಾಗ

ರುಚಿಮೋಹಕ್ಕೊಳಗಾಗದಂತು = ರುಚಿ + ಮೋಹಕ್ಕೆ + ಒಳಗು+ ಆಗದೆ+ ಅಂತು

ಕಠಿಣ ಪದಗಳ ಅರ್ಥ

ನಿಪುಣ = ಜಾಣ
ಲೋಭ= ಎಲ್ಲವೂ ನನಗೇ ಬೇಕೆನ್ನುವುದು

ಅರ್ಥ

ಮಾತಿನಲ್ಲಿ ಬ್ರಹ್ಮವನ್ನು ತೋರಿಸುವ, ಆಚರಣೆಗೆ ಒಲ್ಲದ, ತಾನು ಶುಚಿಯಾಗಿರದ, ಶಾಸ್ತ್ರ ಪಾರಂಗತನಾಗದ, ಕಾಮ, ಕ್ರೋಧ, ಲೋಭ, ಮೋಹ, ಮದ ಮಾತ್ಸರ್ಯಗಳೆನಿಸಿದ ಅರಿಷಡ್ವರ್ಗಗಳನ್ನು ತ್ಯಜಿಸದೇ ಬಡಾಯಿ ಕೊಚ್ಚುವವನಿಗೆ ಮೋಕ್ಷ ಲಭಿಸದು.

ವಿವರಣೆ

ಬ್ರಹ್ಮಜ್ಞಾನಿಯಲ್ಲದವನಿಗೆ ಮುಕ್ತಿಯೆಂದಿಗೂ ಸಿಗದು. ತೋರಿಕೆಯು ಎಂದೂ ಶಾಶ್ವತವಲ್ಲ. ಯಾವುದನ್ನೇ ಆದರೂ ಸತತ ಪ್ರಯತ್ನಗಳಿಂದ ಗಳಿಸಬೇಕು. ಇಲ್ಲವಾದಲ್ಲಿ ಅವನು ಜ್ಞಾನಿಯಾಗಲಾರನು.

ಇತರರಿಗೆ ಬೋಧಿಸುವ ಮುನ್ನ ತಾ ಶುದ್ಧವಾಗಬೇಕು. ಸಕಲಶಾಸ್ತ್ರಗಳಲ್ಲಿ ಪಳಗಿದವನಾಗಬೇಕು. ಕಾಮವನ್ನು ತ್ಯಜಿಸಬೇಕು (ಸುಲಭದ ಮಾತಲ್ಲ ಬಿಡಿ).
ಕೋಪವನ್ನು ತ್ಯಜಿಸಬೇಕು, (ಇದನ್ನು ಕೆಲವರು ಸುಮಾರು ಸಲ ಮಾಡಿದ್ದಾರೆ). ಲೋಭಿಯಾಗಬಾರದು (ಬಹಳಕಷ್ಟ), ಮೋಹವಿರಬಾರದು (ಇದನ್ನು ಹೊರತು ಪಡಿಸಿದರೆ ಬದುಕಿಲ್ಲವೆಂಬ ಭ್ರಮೆ ಇಂದಿನ ಜನಾಂಗಕ್ಕೆ ಹೆಚ್ಚು - ಎಲ್ಲ ಕಾಲದಲ್ಲೂ). ಅಹಮಿಕೆ ಮತ್ತು ಹೊಟ್ಟೆಕಿಚ್ಚನ್ನು ಬಿಡಬೇಕು. ಈ ಕೆಲಸಗಳನ್ನು ಮಾಡದೆ, ಕೇವಲ ನಾನೇ ದೈವವೆಂದು ಬ್ರಹ್ಮನೆಂದು ಹೇಳಿಕೊಳ್ಳುವವನಿಗೆ ಎಂದಿಗೂ ಮುಕ್ತಿ ಸಿಗಲಾರದು.

ಸಚರಸ್ಥಾವರಕೆಲ್ಲ ಸರ್ವ ಸುಖದುಃಖಂಗಳ್ ಸಮಾನಂಗಳೆಂ |ದಚಲಾನಂದದಿ ತನ್ನನನ್ಯ ರೆಣಿಸಲ್ ಸುಜ್ಞಾನಿಗಳ್ ನೀರಿನೊಳ್ |ಶುಚಿಯೊಳ್ ಪಾದವನಿಟ್ಟು ತೋರ್ಪ ತೆ...
05/06/2025

ಸಚರಸ್ಥಾವರಕೆಲ್ಲ ಸರ್ವ ಸುಖದುಃಖಂಗಳ್ ಸಮಾನಂಗಳೆಂ |
ದಚಲಾನಂದದಿ ತನ್ನನನ್ಯ ರೆಣಿಸಲ್ ಸುಜ್ಞಾನಿಗಳ್ ನೀರಿನೊಳ್ |
ಶುಚಿಯೊಳ್ ಪಾದವನಿಟ್ಟು ತೋರ್ಪ ತೆರದೊಳ್ ತಾನಾಗದೇ ವಾದಿಪಾ|
ವಚನ ಬ್ರಹ್ಮದೆ ಮುಕ್ತಿಯೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೯೯||

ಪದವಿಭಾಗ

ಸಮಾನಂಗಳೆಂದಚಲಾನಂದದಿ = ಸಮಾನಂಗಳ್ + ಎಂದು+ ಅಚಲ+ ಅನಂದದಿ
ತನ್ನನನ್ಯರೆಣಿಸಲ್ = ತನ್ನನು + ಅನ್ಯರು + ಎಣಿಸಲ್

ಕಠಿಣ ಪದಗಳ ಅರ್ಥ

ಸಚರ= ಚಲಿಸುವ
ಸ್ಥಾವರ = ನೆಲೆನಿಂತಿರುವ
ಅಚಲ = ಗಟ್ಟಿಯಾದ
ಅನ್ಯ = ಬೇರೆಯ

ಅರ್ಥ

ಜಗತ್ತು ಚರಾಚರ ವಸ್ತುಗಳಿಂದ ತುಂಬಿದೆ. ಇಂತಹ ವಿಶ್ವಕ್ಕೆ ಸುಖ ದುಃಖಗಳು ಸಮಾನವಾಗಿರುತ್ತವೆ. ಇದನ್ನು ಅರಿತ ದ್ರಷ್ಟಾರರು ಆತ್ಮಾನಂದದ ಜೊತೆಗೇ ಕಾಲ ಕಳೆಯುತ್ತಾ ಇತರರಿಗೂ ಸುಜ್ಞಾನವನ್ನು ಬೋಧಿಸುತ್ತಾರೆ. ಆದರೆ ಅಂತಹ ಮಾರ್ಗದಲ್ಲಿ ನಡೆಯದೆ ಬರಿಯ ಬಾಯಿ ವೇದಾಂತವನ್ನು ಹೇಳುವ ಅರ್ಜುನ ಸನ್ಯಾಸಿಗಳು, ಆಚಾರ ವಿಚಾರಗಳಲ್ಲಿ ಭಿನ್ನರಾದವರಿಗೆ ಮೋಕ್ಷವೆಂದಿಗೂ ಸಿಗದು.

ವಿವರಣೆ

ನಾವು ಯಾವಾಗ ಸಾಕಾರ ದೈವದಿಂದ ನಿರಾಕಾರ ದೈವತ್ವದತ್ತ ಮನ ಮಾಡುತ್ತೇವೆಯೋ, ಆಗ ಸುಖ - ದುಃಖ, ನೋವು- ನಲಿವು, ಉತ್ಸಾಹ - ನೀರಸಗಳು, ಸ್ತುತಿ - ನಿಂದೆಗಳು ಸಮಾನವೆನಿಸತೊಡಗುತ್ತವೆ. ಮೌನ ಮತ್ತು ನಗೆಯೇ ಜೊತೆಗಾರರಾಗುವ ಈ ಪರಮ ಸ್ಥಿತಿಯು ಮಾನವನ ಜೀವನದ ತುರೀಯ ಕ್ಷಣ. ಮಾನವ ದೈವತ್ವಕ್ಕೇರುವ ಅಮೃತ ಘಳಿಗೆ.

ಇಂತಹ ಮಾರ್ಗದರ್ಶಕರು ಜಗದೆಲ್ಲೆಡೆಯೂ ಇರುತ್ತಾರೆ. ಆದರೆ ಇವರ ಬಗೆಗಿನ ದಿವ್ಯ ನಿರ್ಲಕ್ಷ್ಯವೇ ಸಂಸ್ಕೃತಿ ಎನಿಸಿಬಿಡುವುದು ವಿಪರ್ಯಾಸ.

ಜನರು ಇವರ ಮಾತನ್ನು ಕೇಳುವರೇ ಹೊರತು ಅನುಸರಿಸಲಾರರು. ಶುಚಿತ್ವ ಎಲ್ಲರಿಗೂ ಬೇಕು, ಆದರೆ ತಾವು ಮಾತ್ರ ಶುಚಿಯಾಗರು. ವಿತಂಡವಾದಗಳ ಜೊತೆಗೆ ಇತರರ ಮಾರ್ಗದರ್ಶನಕ್ಕೆ ಒಗ್ಗದ ಭಂಡರಿಗೆ ಎಂದಿಗೂ ಮೋಕ್ಷ ಲಭಿಸದು.

ರಚನಂಗೆಯ್ಯದೆ ಧರ್ಮಕೀರ್ತಿಯೆರಡಂ ಸದ್ಧರ್ಮಮಂ ಪಾಪದಾ| ನಿಚಯಕ್ಕಿಕ್ಕದೆ ತತ್ವಕೇಳಿಜಗವೆಲ್ಲಂ ಬೊಮ್ಮಮೆಂದೆನ್ನದೆ | ಉಚಿತಾಲೋಚನೆಯಿಂದ ತನ್ನ ನಿಜಮುಂ...
04/06/2025

ರಚನಂಗೆಯ್ಯದೆ ಧರ್ಮಕೀರ್ತಿಯೆರಡಂ ಸದ್ಧರ್ಮಮಂ ಪಾಪದಾ|
ನಿಚಯಕ್ಕಿಕ್ಕದೆ ತತ್ವಕೇಳಿಜಗವೆಲ್ಲಂ ಬೊಮ್ಮಮೆಂದೆನ್ನದೆ |
ಉಚಿತಾಲೋಚನೆಯಿಂದ ತನ್ನ ನಿಜಮುಂ ತಾಂ ಕಾಣದೇ ವಾದಿಪಾ |
ವಚನ ಬ್ರಹ್ಮವೆ ಮುಕ್ತಿಯೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೯೮||

ಪದವಿಭಾಗ

ಬೊಮ್ಮಮೆಂದೆನ್ನದೆ = ಬೊಮ್ಮಂ+ ಎಂದು+ ಎನ್ನದೆ.

ಕಠಿಣ ಪದಗಳ ಅರ್ಥ

ರಚನೆ= ರಚಿತವಾದುದು, ಸಂಪಾದಿಸಿದ್ದು
ನಿಚಯ = ಸಮೂಹ

ಅರ್ಥ

ಬರಿಯ ಬಾಯಲ್ಲಿ ಭಗವಂತನನ್ನು ತೋರಿಸುವ, ಆಚರಣೆಯನ್ನು ಮಾಡದಿರುವ ಮಾನಿಸರು ಮುಕ್ತಿ ಹೊಂದುವುದಿಲ್ಲ. ಧರ್ಮ ಮತ್ತು ಕೀರ್ತಿಗಳೆರಡನ್ನು ಸಹಜವಾಗಿ ಸಂಪಾದಿಸದೇ ಇರುವ, ಒಳ್ಳೆಯ ಧರ್ಮವನ್ನು ಅರಿತು ಪಾಪದ ಕೆಲಸ ಮಾಡದಿರುವ, ಜಗವೆಲ್ಲವೂ ಬ್ರಹ್ಮನೆಂದು ಭಾವಿಸದೇ ಇರುವ, ತನ್ನ ತಾನು ಅರಿಯದೇ ಇರುವ, ನಾನೇ ಬ್ರಹ್ಮನೆಂದು ಬಾಯಿಬಡಿಯುವ, ಜನಗಳು ಮುಕ್ತಿಗಳಿಸಲಾರರು. ಬರಿಮಾತಿನ ಮಲ್ಲರು ಯಾವುದೇ ಸಾಧಕರಾಗರು.

ವಿವರಣೆ

'ಸೋಹಂ ಬ್ರಹ್ಮ'ವೆಂಬುದನ್ನು ಅರಿಯದೇ 'ಅಹಂ ಬ್ರಹ್ಮಾಸ್ಮಿ' ಎಂದು ಮೆರೆವ ಜನ ಮೋಕ್ಷಗಳಿಸಲಾಗದು. (ಅಹಂ ಬ್ರಹ್ಮಾಸ್ಮಿ - ನಾನೇ ಬ್ರಹ್ಮನೆಂಬ ಮದ, ಸೋಹಂನಲ್ಲಿ ಸಮರ್ಪಣೆಯಿದೆ )

ಧರ್ಮಮಾರ್ಗವು ದೊಡ್ಡದು, ಅದರ ಮೂಲಕವೇ ನಾವು ಸಾಧನೆ ಮಾಡಬೇಕಾಗುತ್ತದೆ. ಧರ್ಮವರಿಯದೆ ಕೀರ್ತಿ ಪಡೆಯುವುದು ಉಚಿತವಲ್ಲ. ಒಳಿತಿನ ದಾರಿಯಲ್ಲಿದ್ದವರಿಗೆ ಪಾಪದ ಚಿಂತನೆಗಳು ಬಾರವು. ತತ್ತ್ವವು ನಮಗೆ ಸರಿದಾರಿಯನ್ನು ಸೂಚಿಸುವ ಕೈಮರ. ಅದರ ಮೂಲಕವೇ ಪ್ರಪಂಚವನ್ನು ದೈವ ಅಥವಾ ದೈವದ ಸೃಷ್ಟಿ ಎಂದುಕೊಳ್ಳಬೇಕು. ಹಾಗೆ ಮಾಡದಿರುವುದು ಲೋಪವೇ ಸರಿ.

ಸಕಾಲಿಕ ಚಿಂತನೆಗಳ ಮೂಲಕ ಹೊರಗನ್ನೂ, ತನ್ನೊಳಗನ್ನೂ ಅರಿಯುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ನಾನೇ ಸರ್ವ ಶ್ರೇಷ್ಠ ಎಂದು ಅಹಂಕಾರ ಪಟ್ಟರೆ ಅಂತಹವರಿಗೆ ಮುಕ್ತಿಯು ದೊರಕದು.

ಇಲ್ಲಿ ಬ್ರಹ್ಮ ಎಂದರೆ ಸತ್ಯದ ವಾಕ್ಯವೆಂಬ ಅರ್ಥವೂ ಇದೆ. ಆದರೆ ಅದು ಅಭ್ಯಾಸ ಮತ್ತು ಅನುಭವಗಳ ಮೂಲಕ ರೂಢಿಯಾಗುತ್ತದೆ. ಅದಕ್ಕೆ ಗುರುವಿನ ಉಪದೇಶದ ಅಗತ್ಯವಿದೆ.

ಮೋಕ್ಷ ಸಂಪಾದಿಸಲು ಎದೆಯು ಶುದ್ಧವಿರಬೇಕು. ವೇದಗಳೂ ಸಹಾ ಮನದ ಮಡಿಯಾಗದೇ ಮುಕ್ತಿ ಸಿಗದೆನ್ನುತ್ತವೆ. ಮನದ ಮಡಿಯಿಂದ ಮಾತ್ರ ಬದುಕು ಸುಗಮವಾಗುತ್ತದೆ.

ಚಿತ್ತಶುದ್ಧಿಯಿಂದ ಬಾಳೋಣ.

ಪೊಡೆಯೋಳ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ಧನೇನಪ್ಪನೇ |ಕಡುಪಾಪಿಂ ಬಲು ಮೀಯಲಾತ ಶುಚಿಯೇ ಕಾಕಾಳಿಯೇಂ ಮೀಯದೇ |ಗುಡಪಾನಂಗಳೊಳದ್ದೆ ಬೇವಿನ ಫ...
03/06/2025

ಪೊಡೆಯೋಳ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ಧನೇನಪ್ಪನೇ |
ಕಡುಪಾಪಿಂ ಬಲು ಮೀಯಲಾತ ಶುಚಿಯೇ ಕಾಕಾಳಿಯೇಂ ಮೀಯದೇ |
ಗುಡಪಾನಂಗಳೊಳದ್ದೆ ಬೇವಿನ ಫಲಂ ಸ್ವಾದಪ್ಪುದೇ ಲೋಕದೊಳ್ |
ಮಡಿಯೇ ನಿರ್ಮಲ ಚಿತ್ತವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೯೭||

ಪದವಿಭಾಗ

ಶುದ್ಧನೇನಪ್ಪನೇ= ಶುದ್ಧನು+ ಏನು+ ಅಪ್ಪನೇ
ಗುಡಪಾನಂಗಳೊಳದ್ದೆ = ಗುಡಪಾನಂಗಳೊಳು+ ಅದ್ದೆ

ಕಠಿಣ ಪದಗಳ ಅರ್ಥ

ಪೊಡೆ = ಹೊಟ್ಟೆ
ಪಂಕ= ಕೆಸರು, ಮಲ
ಮೀಯಲ್ = ಸ್ನಾನ ಮಾಡಲು
ಕಾಕಾಳಿ= ಕಾಗೆಗಳ ಗುಂಪು
ಗುಡ = ಬೆಲ್ಲ
ಸ್ವಾದ = ಸವಿ
ಮಡಿ = ಸ್ವಚ್ಛತೆ

ಅರ್ಥ

ಮನಸಿನ ಶುದ್ಧಿಯೇ ನಿಜವಾದ ಮಡಿ ಎನಿಸುತ್ತದೆ. ಹೊಟ್ಟೆಯಲ್ಲಿ ಮಲ ತುಂಬಿಕೊಂಡು ದೇಹವನ್ನು ಮೇಲಿನಿಂದ ತೊಳೆದರೆ ಸ್ವಚ್ಛವಾಗುವುದಿಲ್ಲ. ಅದೇ ರೀತಿ ಪಾಪಿ ಸ್ನಾನ ಮಾಡಿದರೆ ಪುಣ್ಯವಂತನಾಗಬಲ್ಲನೇ? ಕಾಗೆ ಸ್ನಾನ ಮಾಡಿದರೆ ಬೆಳ್ಳಗಾಗುವುದೇ? ಬೇವಿನ ಸೊಪ್ಪನ್ನು ಬೆಲ್ಲದ ಪಾನಕದಲ್ಲಿ ಅದ್ದಿದರೆ ಕಹಿ ಹೋಗಿ ಸಿಹಿಯಾಗುವುದೇ? ಜಗತ್ತಿನಲ್ಲಿ ನಿರ್ಮಲವಾದ ಮನಸ್ಸೇ ಮಡಿ ಎನಿಸುವುದು.

ವಿವರಣೆ

ಈ ಪದ್ಯವು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಶುದ್ಧಿಯೆನ್ನುವುದು ಎರಡು ಬಗೆಯಲ್ಲಿರುತ್ತದೆ. ಒಂದು, ಅಂತರಂಗ. ಎರಡು, ಬಹಿರಂಗ.

ದೇಹ ಶುದ್ಧಿ ಮತ್ತು ಮನದ ಶುದ್ಧಿಗಳು ಅಂತೆಯೇ ಬೇರೆ ಬೇರೆ.

ಅಹಲ್ಯೆಯ ಮತ್ತು ಧಾನ್ಯಮಾಲಿನಿಯ ( ಶ್ರೀ ರಾಮಾಯಣದರ್ಶನಂ) ಮಾತುಗಳನ್ನು ಗಮನಿಸಿದರೆ "ಮೆಯ್ಯನಿತ್ತೆನಲ್ಲದೆ ಮನವನಿತ್ತೆನೆ " ಎನ್ನುವಲ್ಲಿ
ಮನದ ಪಾವಿತ್ರ್ಯತೆಯ ಅರಿವು ಉಂಟಾಗುತ್ತದೆ. ಒಳಗಿನ ನಿರ್ಮಲತೆಯಿದ್ದಲ್ಲಿ ಮಾತ್ರ ಹೊರಗಿನ ನಿರ್ಮಲತೆ ಬೆಳಗೀತು. ಹೊರಗಿನ ಸ್ವಚ್ಛತೆ ತೋರಿಕೆಯಾದೀತು. ಈ ಒಳ ಮತ್ತು ಹೊರಗುಗಳ ಸಮೀಕರಣದ ಬಗ್ಗೆ ಎಚ್ಚರವಿರಬೇಕು.

ಹೊಟ್ಟೆಯೊಳಗೆ ಮಲವನ್ನು ತುಂಬಿಕೊಂಡು ಹೊರಗಿನ ಶರೀರವನ್ನು ವಿವಿಧ ಪ್ರಸಾಧನಗಳಿಂದ ಅಲಂಕರಿಸಿ ಪೂಸಿ ತೊಳೆದು ಕೊಂಡರೆ ಮಡಿಯಾಗುವುದೇ. ಪಾಪಿ ಸ್ನಾನ ಮಾಡಲು ಅವನ ಪಾಪ ನಾಶವಾಗದು. (ಪಾಪವನ್ನು ಕುರಿತ ಅನುಕಂಪೆ ಪಾಪಿಯನ್ನು ಸಮರ್ಥಿಸಬಾರದು - ಕುವೆಂಪು) ಕಾಗೆಗಳು ದಿನದಲ್ಲಿ ಅನೇಕ ಬಾರಿ ಸ್ನಾನ ಮಾಡುತ್ತವೆ, ಅದರಿಂದಾಗುವ ಉಪಯೋಗವೇನು? ಕಾಗೆ ಬೆಳ್ಳಗಾದೀತೇ?

ಜಗತ್ತಿನ ಯಾವ ವಸ್ತುವೂ ತನ್ನ ಮೂಲ ಗುಣವನ್ನು ಬಿಟ್ಟು ಕೊಡದು. ಅಂತೆಯೇ ಬೇವಿನ ಗುಣವಾದ ಕಹಿಯು ಎಲ್ಲಿ ಹೋದರೂ ತನ್ನ ರುಚಿಯನ್ನು ಬಿಡದು. ಅದನ್ನು ಬೆಲ್ಲದ ಪಾನಕದಲ್ಲಿ ಮುಳುಗಿಸಿಟ್ಟರೂ ಕಹಿ ಹೋಗದು.

ಆದ್ದರಿಂದ ಮಡಿಮಡಿಯೆಂದು ಅಡಿಗಡಿಗೆ ಹಾರುವ ಜನರೇ ಕೇಳಿ ನಿರ್ಮಲವಾದ ಮನವೇ ಮಡಿ. ಅನ್ಯವೆಲ್ಲವೂ ಮಡಿಯಾಗದು. ಮನದ ಮಡಿಯ ಮಾಡಿದವನ ಸನಿಹದೊಳಿರುವನಯ್ಯಾ ಶಿವಾ.

ಮನವನ್ನು ಶುದ್ಧವಾಗಿ ಇಟ್ಟುಕೊಳ್ಳೋಣ.

ಕೋಲುತಿರ್ಪಯ್ಯಗಳೋದು ಬೇನೆಯಳಿವಾ ತೀಕ್ಷ್ಣೌಷಧಂ ಪಾಡುಬಿ |ದ್ದುಳುವಾರಂಭದ ಧಾನ್ಯ ಶತ್ರುಜಯ ಪುತ್ರೋತ್ಪತ್ತಿ ಕೈಗಿಕ್ಕುವಾ |ಬಳೆ ರಾಜಾಶ್ರಯಮಿಕ್ಕುವ...
02/06/2025

ಕೋಲುತಿರ್ಪಯ್ಯಗಳೋದು ಬೇನೆಯಳಿವಾ ತೀಕ್ಷ್ಣೌಷಧಂ ಪಾಡುಬಿ |
ದ್ದುಳುವಾರಂಭದ ಧಾನ್ಯ ಶತ್ರುಜಯ ಪುತ್ರೋತ್ಪತ್ತಿ ಕೈಗಿಕ್ಕುವಾ |
ಬಳೆ ರಾಜಾಶ್ರಯಮಿಕ್ಕುವಾಪದಧನಂ ಬೇಹಾರಮಿಂತೆಲ್ಲಮುಂ |
ಬಲುಕಷ್ಟಂ ಬಳಿಕೊಳ್ಳಿತೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೯೬||

ಪದವಿಭಾಗ

ಕೋಲುತಿರ್ಪಯ್ಯಗಳೋದು = ಕೋಲುತ+ ಇರ್ಪ+ ಅಯ್ಯಗಳ+ ಓದು.
ಪಾಡುಬಿದ್ದುಳುವಾರಂಭದ = ಪಾಡುಬಿದ್ದು + ಉಳುವ + ಆರಂಭದ.
ರಾಜಾಶ್ರಯಮಿಕ್ಕುವಾಪದಧನಂ = ರಾಜಾಶ್ರಯಂ+ಇಕ್ಕುವ + ಆಪದಧನಂ.
ಬಳಿಕೊಳ್ಳಿತೈ = ಬಳಿಕ+ಒಳ್ಳಿತೈ.

ಕಠಿಣ ಪದಗಳ ಅರ್ಥ

ಕೋಲುತ= ಶಿಕ್ಷಿಸುತ, ದಂಡಿಸುತ
ಅಯ್ಯ= ಗುರು
ಅಯ್ಯಗಳು = ಗುರುಗಳು
ಬೇನೆ= ರೋಗ
ತೀಕ್ಷ್ಣ= ಕಡು
ಆರಂಭ = ಬೇಸಾಯ
ಉತ್ಪತ್ತಿ = ಹುಟ್ಟುವಿಕೆ
ಬೇಹಾರ = ವ್ಯವಹಾರ

ಅರ್ಥ

ಮೊದಲು ಕಷ್ಟವೆನಿಸುವ ಆದರೆ ಅಂತ್ಯದಲ್ಲಿ ಸುಖ ಕೊಡುವ ವಿಷಯ ಮತ್ತು ವಿಚಾರಗಳು ಬಹಳ ಒಳ್ಳೆಯದು. ಕೋಲು ಹಿಡಿದು ಕಲಿಸುವ ಗುರುವಿನ ಬಳಿಯ ಓದು, ರೋಗ ತೊಲಗಿಸುವ ಕಡು ಔಷಧಿಗಳು, ಕಷ್ಟ ಪಟ್ಟು ಉಳುಮೆ ಮಾಡಿ ಪಡೆದ ಬೇಸಾಯದ ಧಾನ್ಯ. ವೈರಿಗಳನ್ನು ಸೋಲಿಸುವುದು, ಕೈಗೆ ತೊಡುವ ಬಳೆ, ರಾಜರ ಆಶ್ರಯ, ಎತ್ತಿಟ್ಟ ಆಪದ್ಧನ. ವ್ಯವಹಾರ, ಇವುಗಳು ಮೊದಲಿಗೆ ಕಷ್ಟವೆನಿಸಿದರೂ ಕಾಲ ಕಳೆದಂತೆ ಒಳ್ಳೆಯದಾಗುತ್ತವೆ.

ವಿವರಣೆ

ಆಳಾಗಬಲ್ಲವನು ಅರಸಾಗಬಲ್ಲ, ಆದರೆ ಅರಸಾಗಬಲ್ಲವನು ಆಳಾಗಲಾರ. ಕೊನೆಗೆ ಗೆಲ್ಲುವ ಸತ್ಯದ ಚಲಿಸುವ ಹಾದಿ ಮಾತ್ರ ಕಠಿಣವೇ ಸರಿ. ಯಾವುದೇ ಹೊಸ ಹಾದಿಯ ನಿರ್ಮಾಣ ಸುಲಭವಲ್ಲ. ಆದರೆ ಹಾದಿ ಸುಗಮವಾದರೆ ಪ್ರಯಾಣ ಸಲೀಸು.

ಬುದ್ಧಿಕಲಿಸುವ ಮೇಷ್ಟರಿಗೆ ದಂಡಿಸುವ ಅಧಿಕಾರವೂ ಇರುತ್ತದೆ. ಆಗ ಮಾತ್ರ ಶಿಷ್ಯ ಸನ್ಮಾರ್ಗದಲ್ಲಿ ಸಾಗಬಲ್ಲ. (ಈ ಕಾಲಕ್ಕೆ ಅನ್ವಯಿಸದು. ಈಗ ಗುರುಗಳು ಶಿಷ್ಯರನ್ನು ದುರುಗುಟ್ಟಿ ನೋಡಿದರೂ ತಪ್ಪೇ) ರೋಗವಾಸಿಯಾಗಲು ಮದ್ದು ತೀಕ್ಷ್ಯವಿದ್ದರೆ ಮಾತ್ರ ಸಾಧ್ಯ. ಕಠಿಣ ಪಥ್ಯಗಳು ಮಾತ್ರ ವ್ಯಕ್ತಿಯನ್ನು ನಿರೋಗಿಯನ್ನಾಗಿಸುತ್ತವೆ.

ಪಾಳುನೆಲವನ್ನು ಉತ್ತು ಬಿತ್ತರಲ್ಲವೇ ಬೆಳೆಯ ಆಗಮನ, ಶತ್ರುಗಳನ್ನು ಗೆಲ್ಲುವುದು ಸುಲಭವಲ್ಲ. ಆದರೆ ಗೆದ್ದಾಗ ಆಗುವ ಆನಂದಕ್ಕೆ ಎಣೆಯಿದೆಯೇ?

ಮಗು ಹುಟ್ಟಿದಾಗ ಯಾರಿಗೆ ತಾನೇ ಆನಂದವಾಗದು. ಆದರೆ ವಂಶವನ್ನು ಬೆಳೆಸಲು ನಡೆಸುವ ತಯಾರಿ, ಮನೆ ಕಟ್ಟಿ ಕಾಸು ಕೂಡಿಟ್ಟು ಸಂಬಂಧ ಬೆಳೆಸಿ ಜೀವನ ಸಾಗಿಸುವುದು ಸುಲಭದ ಮಾತಲ್ಲ. ಕೈಗೆ ಬಳೆ ತೊಟ್ಟುಕೊಳ್ಳುವಾಗ ಆಗುವ ನೋವು ತೊಟ್ಟು ಕೊಂಡ ಅನಂತರ ಸಿಗುವ ಸುಖ ಎರಡೂ ಅವರ್ಣನೀಯವೇ ಸರಿ. ರಾಜರ ರಕ್ಷಣೆ ಸಿಗುವುದೇ ದುರ್ಲಭ, ಅಂತಹುದು ಸಿಕ್ಕಾಗ ಆಗುವ ಆನಂದವೇ ಬೇರೆ. ಸಂಪಾದನೆ ಮಾಡುವಾಗ ಉಳಿಸಿಟ್ಟ ಅಷ್ಟಿಷ್ಟು ಹಣ ಆಪದ್ಧನವಾದಾಗ ಆಗುವ ಸಂತಸಕ್ಕೆ ಎಲ್ಲೆಯಿದೆಯೇ.

ದಾಕ್ಷಿಣ್ಯರಹಿತ ವ್ಯವಹಾರ ಮಾಡುವಾಗ ಕಷ್ಟವೆನಿಸಿದರೂ ಕೊನೆಗೆ ಲಾಭವನ್ನೇ ತಂದುಕೊಡುತ್ತದೆ.

ಕಷ್ಟಪಟ್ಟರಲ್ಲವೇ ಸುಖ.

ಕುರುಡಂ ಕನ್ನಡಿಯಂ ಕವೀಂದ್ರರ ಮಹಾದುರ್ಮಾರ್ಗಿಗಳ್ ತ್ಯಾಗಿಯಂ|ಬರಡಂ ಬಾಲರಮುದ್ದ ಬಂಜಿ ಕಡುಚೋರಂ ಚಂದ್ರನಂ ಕಾವ್ಯದ |ಚ್ಚರಿಯಂ ಗಾಂಪರು ಪಾಪಿಗಳ್ ಸು...
01/06/2025

ಕುರುಡಂ ಕನ್ನಡಿಯಂ ಕವೀಂದ್ರರ ಮಹಾದುರ್ಮಾರ್ಗಿಗಳ್ ತ್ಯಾಗಿಯಂ|
ಬರಡಂ ಬಾಲರಮುದ್ದ ಬಂಜಿ ಕಡುಚೋರಂ ಚಂದ್ರನಂ ಕಾವ್ಯದ |
ಚ್ಚರಿಯಂ ಗಾಂಪರು ಪಾಪಿಗಳ್ ಸುಜನರಂ ಮಾಣಿಕ್ಯಮಂ ಮರ್ಕಟಂ |
ಜರೆಯಲ್ ಸಿಂಗವ ಕುಂದುದೇಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೯೫||

ಪದವಿಭಾಗ

ಕಾವ್ಯದಚ್ಚರಿಯಂ= ಕಾವ್ಯದ+ ಅಚ್ಚರಿಯಂ

ಕಠಿಣ ಪದಗಳ ಅರ್ಥ

ಬರಡು = ಹಯನಲ್ಲದವನು
ಗಾಂಪರು = ದಡ್ಡರು
ಮರ್ಕಟ = ಕೋತಿ
ಜರೆ= ನಿಂದಿಸು
ಸಿಂಗ= ಸಿಂಹ

ಅರ್ಥ

ಕೆಲವು ಜನ ಜರೆಯುವುದಕ್ಕೆಂದೇ ಜನಿಸಿರುತ್ತಾರೆ. ಆದರೆ ಅವರು ಜರೆಯುವುದರಿಂದ ಯಾವುದೇ ಪ್ರಯೋಜನವಾಗದು. ಹಾಗೆ ಜರೆಸಿಕೊಂಡವರಿಗೆ ಕುಂದೇನೂ ಉಂಟಾಗದು. ಕುರುಡ ಕನ್ನಡಿಯ ಜರೆದರೆ, ದುರ್ಮಾರ್ಗಿಗಳು ಕವಿಗಳನ್ನು ನಿಂದಿಸಿದರೆ, ಇಲ್ಲದವನು ತ್ಯಾಗಿಯನ್ನು ಜರೆದರೆ, ಬಾಲರನ್ನು ಲಾಲಿಸುವುದನ್ನು ಬಂಜೆ ನಿಂದಿಸಿದರೆ, ಸಾಮಾನ್ಯನು ಕಾವ್ಯದ ಸೊಬಗನ್ನು ಜರೆದರೆ, ಪಾಪಿಗಳು ಸಜ್ಜನರನ್ನು ನಿಂದಿಸಿದರೆ, ಕೋತಿಯು ಮಾಣಿಕ್ಯವನ್ನು ಜರೆದರೆ, ಅಡವಿಯ ಸಿಂಹವನ್ನು ಗ್ರಾಮ ಸಿಂಹವು ಜರೆದರೆ ಜರೆಸಿಕೊಂಡವರಿಗೆ ಯಾವ ಕೇಡೂ ಆಗುವುದಿಲ್ಲ.

ವಿವರಣೆ

ನಮಗೆ ಯಾವುದು ಲಭ್ಯವಿಲ್ಲವೋ ಅದನ್ನು ದೂರುವುದು ಮಾನವನ ಸ್ವಭಾವ. ಕೆಲವೊಮ್ಮೆ ಅದು ಎಟುಕಲಾಗದ ದ್ರಾಕ್ಷಿಯಂತೆ ಹುಳಿಯೂ ಆದೀತು. ಹಾಗೆಯೇ ವಸ್ತುವು ಸಿಗದಿದ್ದಾಗ ನಿಂದನೆಯು ಹುಟ್ಟುತ್ತದೆ.

ಕುರುಡನಿಗೆ ಕನ್ನಡಿಯಿಂದ ಲಾಭವಿಲ್ಲ. ಅದರಿಂದ ಅವನು ಕನ್ನಡಿಯನ್ನು ಜರೆದರೆ ಕನ್ನಡಿಗೆ ಕುಂದುಂಟಾಗದು.

ದುರ್ಜನರು ಕವಿಗಳನ್ನು ಜರೆದರೆ ಕವಿಗಳಿಗೇನೂ ಆಗದು. ಕೈಯಲ್ಲಿ ಏನೂ ಇಲ್ಲದವನು ಅಥವಾ ಇದ್ದೂ ಕೊಡಲಾರದವನು ಕೊಡುಗೈದಾನಿಯನ್ನು ನಿಂದಿಸಿದರೆ ದಾನಿಗಾದ ನಷ್ಟವೇನು.

ಬಂಜೆಯಾದವಳು ಬಾಲರನ್ನು ಮುದ್ದಾಡುವ ದೃಶ್ಯವನ್ನು ಹಳಿದು ಫಲವೇನು? ಆಕೆಗೆ ಮಕ್ಕಳಾಗದೆಂಬ ಅಸೂಯೆಯು ಮತ್ಸರವಾಗಿ ಪರಿಣಮಿಸಿ ಬಿಡುವುದೇ. ಕಳ್ಳನು ಚಂದ್ರನನ್ನು ನಿಂದಿಸಿದರೆ ಬೆಳದಿಂಗಳು ಕಡಿಮೆಯಾದೀತೆ. ಕಳ್ಳನ ಬಾಯಿ ನೊಂದೀತು ಅಷ್ಟೆ.

ಕಾವ್ಯದ ಸೊಬಗು ಪಾಮರರಿಗೆ ಕಾಣಿಸದು. ತಮಗೆ ಗೊತ್ತಾಗಲಿಲ್ಲವೆಂದು ಕಾವ್ಯವೇ ಸರಿಯಿಲ್ಲವೆಂದರೆ ಕಾವ್ಯಕ್ಕೆ ಕುಂದಾಗುವುದೇ?

ಪಾಪಿಗಳು ಒಳ್ಳೆಯ ಜನರನ್ನು ಜರೆದರೆ ಸುಜನರಿಗೆ ಕೇಡಾಗದು. ಮಂಗವು ಮಾಣಿಕ್ಯವನ್ನು ಜರೆದರೇನಾಯ್ತು ಅದರ ಬೆಲೆ ಅರಿಯಲಾದೀತೆ. ಸಿಂಹವನ್ನು ಗ್ರಾಮಸಿಂಹವು(ನಾಯಿ) ಕಂಡು ಬೊಗಳಿದರೆ ಸಿಂಹಕ್ಕೆ ಅವಮಾನವೇ?

ನಾಯಿ ಬೊಗಳಿದರೆ ದೇವಲೋಕ ಹಾಳೇ? ಅಂದರೆ ಯಾರಿಗೆ ಯಾವುದು ಎಟುಕದೋ ಅದರ ಬಗ್ಗೆ ಅಪಸ್ವರ ನುಡಿಯುತ್ತಾರೆ. ಸಾಧಕರು ಇಂತಹ ನಿಂದೆಯ ಬದಲಿಗೆ ಶ್ರದ್ಧೆಯಿಂದ ಕಾರ್ಯ ಸಾಧಿಸುತ್ತಾರೆ.

ಪಶುಗಳ್ ಕ್ರೂರಮೃಗಂಗಳಂಡಜಗಳುಂ ಸರ್ಪಂಗಳುಂ ಕಣ್ಗೆಕಾ|ಣಿಸದತ್ಯುಗ್ರಗ್ರಹಂಗಳು ಪಟುಭಟರ್ ವಿದ್ವಜ್ಜನಂ ಮಂತ್ರಿಗಳ್ |ಋಷಿಗಳ್ ಶಾಂತರು ಯೋಗಿಗಳ್ ಪ್ರಜ...
31/05/2025

ಪಶುಗಳ್ ಕ್ರೂರಮೃಗಂಗಳಂಡಜಗಳುಂ ಸರ್ಪಂಗಳುಂ ಕಣ್ಗೆಕಾ|
ಣಿಸದತ್ಯುಗ್ರಗ್ರಹಂಗಳು ಪಟುಭಟರ್ ವಿದ್ವಜ್ಜನಂ ಮಂತ್ರಿಗಳ್ |
ಋಷಿಗಳ್ ಶಾಂತರು ಯೋಗಿಗಳ್ ಪ್ರಜೆಗಳುಂ ತಾವೆಲ್ಲರುಂ ತಮ್ಮಯಾ|
ಶಿಶುವಂ ಲಾಲಿಸದಿರ್ಪರೇ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೯೪||

ಪದವಿಭಾಗ

ಕ್ರೂರಮೃಗಂಗಳಂಡಜಗಳುಂ = ಕ್ರೂರ+ ಮೃಗಂಗಳು+ ಅಂಡಜಗಳುಂ
ಕಣ್ಗೆಕಾಣಿಸದತ್ಯುಗ್ರಗ್ರಹಂಗಳು = ಕಣ್ಗೆ+ ಕಾಣಿಸದ+ ಅತಿ+ ಉಗ್ರ+ ಗ್ರಹಂಗಳು

ಕಠಿಣ ಪದಗಳ ಅರ್ಥ

ಅಂಡ = ತತ್ತಿ , ಮೊಟ್ಟೆ
ಅಂಡಜ= ತತ್ತಿಯಿಂದ ಹುಟ್ಟಿದ
ಗ್ರಹ= ಕ್ರೂರ ಶಕ್ತಿ, ಕ್ರೂರ ಪ್ರಾಣಿ
ಪಟುಭಟ = ವೀರ
ಲಾಲಿಸು= ಪ್ರೀತಿಸು

ಅರ್ಥ

ಎಲ್ಲ ಪ್ರಾಣಿಗಳಲ್ಲೂ ವಾತ್ಸಲ್ಯ ಇದ್ದೇ ಇರುತ್ತದೆ. ಈ ಪ್ರೇಮವು ಕ್ರೂರ ಮೃಗಗಳಿಗೂ ಅನ್ವಯಿಸುತ್ತದೆ. ಪಶುಗಳು, ಕ್ರೂರ ಪ್ರಾಣಿಗಳು, ತತ್ತಿಯಿಂದ ಹುಟ್ಟಿದವು, ಹಾವುಗಳು, ಕಣ್ಣಿಗೆ ಬೀಳದ ದುಷ್ಟ ಮೃಗಗಳು, ವೀರರು, ವಿದ್ವಾಂಸರು, ಅಮಾತ್ಯರು, ಋಷಿಗಳು, ಶಾಂತ ಸ್ವಭಾವದ ಯೋಗಿಗಳು, ಪ್ರಜೆಗಳು ಯಾರೇ ಆಗಲಿ ತಮ್ಮ ಮಕ್ಕಳನ್ನು ತಾವು ಪ್ರೀತಿಸದೇ ಇರುವುದಿಲ್ಲ.

ವಿವರಣೆ

ಪ್ರಪಂಚದಲ್ಲಿ ಜನಿಸಿದ ಮೇಲೆ ಪ್ರತೀ ಜೀವಿಯ ಪ್ರಮುಖ ಕರ್ತವ್ಯವೆಂದರೆ, ತನ್ನ ವಂಶಾಭಿವೃದ್ಧಿಯನ್ನು ಮಾಡುವುದೇ ಆಗಿದೆ ಎನ್ನುವುದು ನೀತಿ. ಜಿಂಕೆಗೆ ತನ್ನ ಮರಿಗಳ ಬಗ್ಗೆ ಇರುವ ಕಾಳಜಿಯಂತೆಯೇ ಹುಲಿಗೂ ತನ್ನ ಮರಿಗಳ ಬಗ್ಗೆ ಇರುತ್ತದೆ. ಅಂದರೆ, ಪ್ರಾಣಿ ಸಾಧುವಾಗಿರಲೀ, ಅಥವಾ ಕ್ರೂರಿಯಾಗಿರಲೀ ತನ್ನ ಕುಲದ ಮುಂದುವರಿಕೆಯ ಬಗ್ಗೆ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತದೆ.

ಅಂತೆಯೇ ಮನುಷ್ಯರೂ ಕೂಡಾ ತಮ್ಮ ಸಂತತಿಯನ್ನು ಬೆಳೆಸಲು ಬಯಸುತ್ತಾರೆ. ಇದೇ ಜಗದ ನಿಯಮ. ಅದರಂತೆ ಇಲ್ಲಿ ಕೆಲವು ಉದಾಹರಣೆಗಳನ್ನು ಹೇಳಲಾಗಿದೆ. ಗುಂಪು ಯಾವುದೇ ಇರಲಿ ವಂಶದ ಪೆಂಪಿಗಾಗಿಯೇ ಬದುಕುತ್ತವೆ. ಪಶು, ಮೃಗ, ಮೊಟ್ಟೆಯಿಂದ ಜನಿಸುವ ಪಕ್ಷಿಗಳು, ಸರ್ಪಗಳು, ತಮ್ಮ ಮರಿಗಳ ಬಗ್ಗೆ ಕಾಳಜಿ ತೋರಿಸದೇ ಇರವು.

ಇನ್ನು ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಬೀಳದ ಹುಲಿ, ಸಿಂಹ, ಕರಡಿ, ಚಿರತೆ, ಘೇಂಡಾಮೃಗಗಳೂ ತಮ್ಮ ಮರಿಗಳ ಬಗ್ಗೆ ಅಕರಾಸ್ತೆಯನ್ನು ಹೊಂದಿವೆ.

ಮಾನವರಲ್ಲಿ ವೀರರು, ಪಂಡಿತರು, ಮಂತ್ರಿಗಳು, ಋಷಿಗಳು, ಸಮಾಧಾನಿಗಳು, ಯೋಗಿಗಳು, ಒಟ್ಟಿನಲ್ಲಿ ಎಲ್ಲ ಪ್ರಜೆಗಳೂ ತಮ್ಮ ತಮ್ಮ ಮಕ್ಕಳನ್ನು ಪ್ರೀತಿಸದೇ ಇರಲಾರರು.

ತಾತ್ಪರ್ಯವಿಷ್ಟೇ ಮಕ್ಕಳೆಷ್ಟೇ ಕೆಟ್ಟವರಾದರೂ ಪೋಷಕರು ಕೆಟ್ಟವರಲ್ಲ. ಇಂದು ಅನ್ನದ ಮಕ್ಕಳು ನಾಳೆ ಚಿನ್ನದ ಮಕ್ಕಳೆಂದು ತಿಳಿದು ಬೆಳೆಸುವ ಸಂಸ್ಕೃತಿ ನಮ್ಮದು.

ಸುಚರಿತ್ರರ್ ಸಲೆಕೀರ್ತಿಗೋಸುಗ ಮಹಾಕಷ್ಟಂಗಳಂ ತಾಳಿ ಸೂ| ರಿಚಯಕ್ಕಾದರದಿಂದ ಮಾನಗಳಿತ್ತಾ ಚಂದ್ರತಾರಾರ್ಕವಾ|ದಚಲ ಖ್ಯಾತಿಯತಾಳ್ಪರೀಗಲಿಯೊಳ್ ತಾವೀಯರ...
30/05/2025

ಸುಚರಿತ್ರರ್ ಸಲೆಕೀರ್ತಿಗೋಸುಗ ಮಹಾಕಷ್ಟಂಗಳಂ ತಾಳಿ ಸೂ|
ರಿಚಯಕ್ಕಾದರದಿಂದ ಮಾನಗಳಿತ್ತಾ ಚಂದ್ರತಾರಾರ್ಕವಾ|
ದಚಲ ಖ್ಯಾತಿಯತಾಳ್ಪರೀಗಲಿಯೊಳ್ ತಾವೀಯರೈ ಪೋಗಲಾ|
ವಚನಕ್ಕೇನು ದರಿದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೯೩||

ಪದವಿಭಾಗ

ಸೂರಿಚಯಕ್ಕಾದರದಿಂದ= ಸೂರಿ+ ಚಯಕ್ಕೆ+ ಆದರದಿಂದ
ಮಾನಗಳಿತ್ತಾಚಂದ್ರತಾರಾರ್ಕವಾದಚಲಖ್ಯಾತಿಯತಾಳ್ಪರೀಗಲಿಯೊಳ್ = ಮಾನಗಳ+ ಇತ್ತು+ ಆ + ಚಂದ್ರ+ ತಾರಾ+ಅರ್ಕ+ ಆದ+ ಅಚಲ+ ಖ್ಯಾತಿಯ+ ತಾಳ್ಪರ್+ ಈ+ ಕಲಿಯೊಳ್
ತಾವೀಯರೈ= ತಾವು+ ಈಯರೈ

ಕಠಿಣ ಪದಗಳ ಅರ್ಥ

ಸುಚರಿರ್ತ್ರ= ಸಜ್ಜನರು
ಸಲೆ= ಚೆನ್ನಾದ
ಸೂರಿ= ವಿದ್ವಾಂಸ
ಚಯ= ಸಮೂಹ
ಮಾನ = ಗೌರವ
ಚಂದ್ರತಾರಾರ್ಕವಾದ = ಸೂರ್ಯ, ಚಂದ್ರ ನಕ್ಷತ್ರವಿರುವವರೆಗೂ
ಖ್ಯಾತಿ= ಕೀರ್ತಿ
ಕಲಿ= ಕಲಿಗಾಲ
ವಚನ = ಮಾತು

ಅರ್ಥ

ಮಾತು ಕೊಡುವ ಅದನ್ನು ಉಳಿಸಿಕೊಳ್ಳುವ ಜನರನ್ನು ಸುಚರಿತರು ಎನ್ನುತ್ತೇವೆ. ಹಿಂದೆ ಇಂತಹ ಸಜ್ಜನರು ಕೀರ್ತಿ ಸಂಪಾದಿಸುವ ಸಲುವಾಗಿ ಬಹಳವಾದ ಕಷ್ಟಗಳನ್ನು ಸಹಿಸಿ, ಪಂಡಿತರು, ವಿದ್ವಾಂಸರಿಗೆ ಗೌರವಗಳನ್ನು ಅರ್ಪಿಸಿ, ದೊಡ್ಡ ಕೀರ್ತಿಯನ್ನು ಪಡೆದರು. ಇಂದಿನ ದಿನಗಳಲ್ಲಿ ಅಂತಹ ಜನರೂ ಇಲ್ಲ. ಈ ಕಾಲದಲ್ಲಿ ಜನರು ಮಾತನ್ನು ಕೊಟ್ಟು ತಪ್ಪುವವರೇ ಹೆಚ್ಚಾಗಿದ್ದಾರೆ.

ವಿವರಣೆ

ಸಚ್ಚರಿತರು ಎಂದರೆ ಒಳ್ಳೆಯ ನಡವಳಿಕೆಯುಳ್ಳವರು. ಇವರು ಅದೆಷ್ಟೇ ಕಷ್ಟ ಬಂದರೂ ಅದನ್ನು ಸಹಿಸಿಕೊಂಡು ತಮ್ಮ ಮಾತನ್ನು ಉಳಿಸಿಕೊಳ್ಳುವವರು. ಅವರಿಗೆ ಕೊಟ್ಟ ಮಾತೇ ಮುಖ್ಯವಾಗುವುದು. ರಾಮನ ಪಿತೃವಾಕ್ಯ ಪರಿಪಾಲನೆಯು ಇದಕ್ಕೆ ಒಂದು ನಿದರ್ಶನ.

ಪಂಡಿತರು ಮತ್ತು ವಿದ್ವಾಂಸರಿಗೆ ಗೌರವಾದರಗಳನ್ನು ನೀಡಿ, ಆ ಮೂಲಕ ಸಾಹಿತ್ಯ ಚಿಂತಕರನ್ನು ಸನ್ಮಾನಿಸಿ ಹೆಮ್ಮೆ ಪಡುತ್ತಾರೆ. ತಮಗೆ ಎಷ್ಟೇ ಕಷ್ಟವಾದರೂ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಾರೆ.

ಈಗ ದೃಢವಾಗಿ ಮಾತು ಕೊಡುವವರೂ ಇಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೂ ಇಲ್ಲ.

ಸಹೃದಯರೇ, ಗಮನಿಸಿ ಇದನ್ನು ಸೋಮನಾಥ ತನ್ನ ಕಾಲದಲ್ಲಿ ಹೇಳಿದ್ದಾನೆ. ಅವನ ಕಾಲಕ್ಕೇ ಕಲಿಗಾಲವಾದರೆ ನಮ್ಮ ಕಾಲದ ವಿಚಾರವೇನು.

ಈ ಕಾಲದಲ್ಲಿ ಯಾರೂ ಮಾತು ಕೊಡುವುದಿಲ್ಲ. ಮಾತು ಕೊಟ್ಟವರು ಉಳಿಸಿಕೊಳ್ಳುವುದಿಲ್ಲ. ಮಾತಿಗೇನು ಬರವಿಲ್ಲ. ಕೃತಿಯಲ್ಲಿ ತೋರಿಸುವವರಿಲ್ಲ. ಬರುಬರುತ್ತಾ ದೇಶ ವಚನಶೂರರ ಬೀಡಾಗುತ್ತಿದೆ.

Address

Hosaholalu
Krishnarajapet
571426

Telephone

+919008820892

Website

Alerts

Be the first to know and let us send you an email when ಈ ಮನಸು posts news and promotions. Your email address will not be used for any other purpose, and you can unsubscribe at any time.

Contact The Business

Send a message to ಈ ಮನಸು:

Share

Category